ಶಂಭುಶಿಷ್ಯ ಯಕ್ಷ ಪ್ರತಿಷ್ಠಾನದಿಂದ ಆಯೋಜನೆ
ಲೇಖಕರು : ಸತೀಶ್ ನಾಯಕ್ , ಪಕಳಕು೦ಜ
ಬುಧವಾರ, ಸೆಪ್ಟೆ೦ಬರ್ 16 , 2015
|
ಸೆಪ್ಟೆ೦ಬರ್ 16, 2015
|
ಶಂಭುಶಿಷ್ಯ ಯಕ್ಷ ಪ್ರತಿಷ್ಠಾನದಿಂದ ಆಯೋಜನೆ
ಶಿರಸಿ :
ಸತತ ಐದು ದಿನಗಳ ಕಾಲ ಯಕ್ಷಗಾನದ ನಾನಾ ಆಖ್ಯಾನಗಳ ಯಕ್ಷ ಪಂಚಾಹ ಸರಣಿ ಕಲಾ ಪ್ರದರ್ಶನ ನಗರದಿಂದ ಅನತಿ ದೂರದ ಮುಂಡಿಗೇಸರ ಗ್ರಾಮದ ಶ್ರೀಮಹಾಗಣಪತಿ ದೇವಸ್ಥಾನದ ಆವಾರದಲ್ಲಿ ಅಕ್ಟೋಬರ್ ಎರಡನೆಯ ವಾರದಲ್ಲಿ ನಡೆಯಲಿದೆ.
ಕಲ್ಲಗದ್ದೆ ಶಂಭುಶಿಷ್ಯ ಯಕ್ಷಗಾನ ಪ್ರತಿಷ್ಠಾನವು ಅನಂತ ಯಕ್ಷ ಕಲಾ ಪ್ರತಿಷ್ಠಾನದ ಸಹಯೋಗದಲ್ಲಿ ಯಕ್ಷ ಪಂಚಾಹ ಪ್ರದರ್ಶನ ಸಂಘಟಿಸುತ್ತಿದೆ ಎಂದು ಪ್ರತಿಷ್ಠಾನದ ಮುಖ್ಯಸ್ಥ ವಿನಾಯಕ ಹೆಗಡೆ ಕಲ್ಲಗದ್ದೆ ಮಂಗಳವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಯಕ್ಷಗಾನದ ಶಾಸ್ತ್ರೀಯತೆಗೆ ಧಕ್ಕೆ ಬರದಂತೆ ಮುನ್ನಡೆಸುವ ನಿಟ್ಟಿನಲ್ಲಿ ಸ್ಥಾಪಿತವಾಗಿರುವ ಕಲ್ಲಗದ್ದೆಯ ಶಂಭು ಶಿಷ್ಯ ಯಕ್ಷಗಾನ ಪ್ರತಿಷ್ಠಾನವು ಅನೇಕ ಕಲಾ ಪ್ರದರ್ಶನಗಳನ್ನು ಹಮ್ಮಿಕೊಳ್ಳುತ್ತ ಬಂದಿದೆ. ಪಾರಂಪರಿಕ ಕಲೆಗೆ ಧಕ್ಕೆಯಾಗದ ರೀತಿಯಲ್ಲಿ ಕಲಾತ್ಮಕವಾಗಿ ಪ್ರದರ್ಶಿಸುವದಕ್ಕೆ ಪ್ರಯತ್ನ ನಡೆಸಲಾಗುತ್ತಿದೆ. ಅದಕ್ಕೆ ಪೂರಕವಾಗಿ ಯಕ್ಷ ಪಂಚಾಹ ಆಯೋಜಿಸಲಾಗುತ್ತಿದೆ ಎಂದರು.
ಯಕ್ಷಗಾನಕ್ಕೆ ಕಲೆಗೆ ವಿಶೇಷ ಗೌರವ ತರುವಲ್ಲಿ ಕೆರೆಮನೆ ಶಂಭು ಹೆಗಡೆ ಅವರ ಪಾತ್ರ ಮಹತ್ವದ್ದಾಗಿದೆ. ಅವರಂತೆ ಯಕ್ಷಗಾನವನ್ನು ಬೆಳೆಸಲಾಗದಿದ್ದರೂ ಆ ಕಲೆ ಬೆಳೆಯಬೇಕಾದರೆ ಚಟುವಟಿಕೆ ಹಮ್ಮಿಕೊಳ್ಳಬೇಕಾಗಿದೆ. ಸಂಘಟನೆ ಶಾಸ್ತ್ರೀಯತೆ ಹಾಗೂ ಗುಣಮಟ್ಟದ ಪ್ರಸಂಗ ಪ್ರದರ್ಶನಕ್ಕೆ ಆದ್ಯತೆ ನೀಡುತ್ತಿದೆ. ಸಂಘಟನೆಯ ಈ ಹಂಬಲಕ್ಕೆ ಸಮಾಜದ ಪ್ರತಿಯೊಬ್ಬರೂ ಬೆಂಬಲ ನಿಡಬೇಕು ಎಂದು ವಿನಂತಿಸಿದರು.
ಆಟಕ್ಕೆ ಮೊದಲು ಚರ್ಚೆ ವಿದ್ವಾಂಸ ಉಮಾಕಾಂತ ಭಟ್ಟ ಕೆರೇಕೆ ಮಾತನಾಡಿ, ಯಕ್ಷ ಪಂಚಾಹದಲ್ಲಿ ಐದು ದಿನವೂ ಆಯಾ ಪ್ರಸಂಗಗಳ ಪ್ರದರ್ಶನಕ್ಕೆ ಮೊದಲು ಹಿಮ್ಮೇಳ-ಮುಮ್ಮೇಳ ಕಲಾವಿದರು ಒಟ್ಟಿಗೆ ಕುಳಿತು ಅಂದಿನ ಕಲಾ ಪ್ರದರ್ಶನದ ಪ್ರಸ್ತುತಿಯ ಕುರಿತು ಸಮಾಲೋಚನೆ ನಡೆಸುವದಕ್ಕೆ ಉದ್ದೇಶಿಸಲಾಗಿದೆ ಎಂದರು. ಯಕ್ಷಗಾನದ ಚಿಂತಕರು, ಕಲಾವಿದರು, ಪ್ರೇಕ್ಷಕರು ಪ್ರತ್ಯೇಕವಾಗಿ ಅನಿಸಿಕೆ ವ್ಯಕ್ತಪಡಿಸವದು ಇದ್ದಂತೆಯೇ ಎಲ್ಲರೂ ಸೇರಿ ಈ ಕುರಿತು ಯೋಚಿಸುವ ಅಗತ್ಯವಿದೆ ಎಂದರು.
ಯಕ್ಷಗಾನ ಭಾಗವತ ಕೊಳಗಿ ಕೇಶವ ಹೆಗಡೆ, ಗಣಪತಿ ಭಟ್ಟ ವರ್ಗಾಸರ, ನೆಬ್ಬೂರು ನಾರಾಯಣ ಭಾಗವತ ಪ್ರತಿಷ್ಠಾನದ ಎಸ್.ಜಿ.ಹೆಗಡೆ ಸಂಪಖಂಡ, ಮುಂಡಿಗೇಸರದ ಉದಯ ಹೆಗಡೆ, ರವಿ ಹೆಗಡೆ ಹಳದೋಟ ಉಪಸ್ಥಿತರಿದ್ದರು.
ಐದು ದಿನಗಳಲ್ಲಿ ಯಕ್ಷ ಪಂಚಾಹದಲ್ಲಿ ಅ.7ರಿಂದ ಅ.11ರವರೆಗೆ ಪ್ರತಿದಿನ ಸಂಜೆ 5.30ಕ್ಕೆ ಯಕ್ಷಗಾನ ಪ್ರದರ್ಶನ ನಡೆಯಲಿದೆ. ಕಷ್ಣಾರ್ಜುನ ಕಾಳಗ, ಶ್ರೀರಾಮ ನಿರ್ಯಾಣ, ಕರ್ಣಪರ್ವ, ಶ್ರೀಕಷ್ಣ ಸಂಧಾನ ಹಾಗೂ ಇಂದ್ರಜೀತು-ರಾವಣ ವಧೆ ಪ್ರಸಂಗಗಳನ್ನು ಪ್ರಸ್ತುತ ಪಡಿಸಲಾಗುತ್ತದೆ. ಹಿಮ್ಮೇಳದಲ್ಲಿ ನಾರಾಯಣ ಭಾಗವತ ನೆಬ್ಬೂರು, ಕೇಶವ ಹೆಗಡೆ ಕೊಳಗಿ, ತ್ರಯಂಬಕ ಇಡ್ವಾಣಿ, ಶರತ್ ಜಾನಕೆ, ವಿಘ್ನೇಶ್ವರ ಕೆಸರಕೊಪ್ಪ ಪಾಲ್ಗೊಳ್ಳುವರು. ಮುಮ್ಮೇಳದಲ್ಲಿ ಗೋಡೆ ನಾರಾಯಣ ಹೆಗಡೆ, ವಿನಾಯಕ ಹೆಗಡೆ ಕಲ್ಲಗದ್ದೆ, ವಿ.ಉಮಾಕಾಂತ ಭಟ್ಟ ಕೆರೇಕೆ, ಶಂಕರ ನೀಲ್ಕೋಡ, ಭಾಸ್ಕರ ಜೋಶಿ ಶಿರಳಗಿ, ಉದಯ ಕಡಬಾಳ, ನಾಗೇಂದ್ರ ಮೂರೂರು, ಶ್ರೀಧರ ಚಪ್ಪರಮನೆ, ವೆಂಕಟೇಶ ಬಗ್ರಿಮಕ್ಕಿ, ನಾರಾಯಣ ಹೆಗಡೆ ಗೋಡೆ, ಉಮಾಕಾಂತ ಭಟ್ಟ ಕೆರೇಕೆ, ಕೆ.ಜಿ.ಮಂಜು ಕೆಳಮನೆ ಮುಂತಾದ ಕಲಾವಿದರು ಭಾಗವಹಿಸುವರು.
ಕೃಪೆ :
vijaykarnataka.com
|
|
|